ಶಿರಸಿ: ಲಂಡನ್ನ ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಳಿ ಹಾಗೂ ಅಲ್ಲಿನ ಯಕ್ಷಗಾನ ಅಭಿಮಾನಿಗಳ ಸಹಕಾರದಲ್ಲಿ ಅಭಿನೇತ್ರಿ ಯಕ್ಷಕಲಾ ಸಂಸ್ಥೆ ನೇತೃತ್ವದಲ್ಲಿ ಬಡಗುತಿಟ್ಬಿನ ಯಕ್ಷಗಾನ ಕಲಾವಿದರು ಯುನೈಟೆಡ್ ಕಿಂಗಡಮ್ನ ಹಲವಡೆ ಯಕ್ಷಗಾನ ಪ್ರದರ್ಶನ ನೀಡಲು ತೆರಳಿದ್ದಾರೆ.
ಆಂಗ್ಲ ಭಾಷಿಕರ ನೆಲದಲ್ಲಿ ಅಪ್ಪಟ ಕನ್ನಡದ ಕಲೆಯು ಝೇಂಕರಿಸಲಿದ್ದು, ಜೂನ್ 20 ರಿಂದ ಜುಲೈ 6ರ ತನಕ ಯಕ್ಷಗಾನದ ರಿಂಗಣ ಕೇಳಲಿದೆ. ಚಂಡೆ, ಮದ್ದಲೆಯ ಜೊತೆ ಯಕ್ಷಗಾನ ಕಲೆಯ ಮೂಲಕ ಪೌರಾಣಿಕ ಆಖ್ಯಾನದ ರಸದೌತಣ ನೀಡಲು ಕಲಾವಿದರೂ ಸಜ್ಜಾಗಿದ್ದಾರೆ.
ಪ್ರಸಿದ್ಧ ಕಲಾವಿದರಾದ ಭಾಗವತ ಪ್ರಸನ್ನ ಭಟ್ಟ ಬಾಳ್ಕಲ್, ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ಗಣೇಶ ಗಾಂವಕರ್ ಹೊಸ ಹಿಮ್ಮೇಳದ ಸಾಥ್ ನೀಡಲಿದ್ದಾರೆ. ಮುಮ್ಮೇಳದಲ್ಲಿ ಹೆಸರಾಂತ ಕಲಾವಿದರಾದ ನೀಲಕೋಡ ಶಂಕರ ಹೆಗಡೆ, ಸನ್ಮಯ ಭಟ್ಟ ಮಲವಳ್ಳಿ ವೈವಿಧ್ಯಮಯ ಪಾತ್ರ ಮಾಡಲಿದ್ದಾರೆ. ಜೊತೆಗೆ ಅಲ್ಲಿನ ಸ್ಥಳೀಯ ಕಲಾವಿದರಾದ ಯೋಗೇಂದ್ರ ಮರವಂತೆ, ರಾಜೀವ ಹೆಗಡೆ, ಡಾ. ಗುರುಪ್ರಸಾದ ಪಟ್ವಾ ವೇಷ ಕಟ್ಟಲಿದ್ದಾರೆ.
ಜೂನ್ 20ರಂದು ಬ್ಯಾಸಿಲ್ಡನ್ನಲ್ಲಿ ಲಂಕಾ ದಹನ, 21ರಂದು ರೇಡಿಂಗ್ ನಲ್ಲಿ ಕಂಸ ವಧೆ , 22ರಂದು ಕಾರ್ಡಿಫ್ ನಲ್ಲಿ ಜಾಂಬವತಿ ಕಲ್ಯಾಣ, 28 ರಂದು ಡರ್ಬಿಯಲ್ಲಿ ಗದಾಯುದ್ಧ , 29 ರಂದು ಮ್ಯಾಂಚೆಸ್ಟರ್ ನಲ್ಲಿ ಪಾಂಚಜನ್ಯ ಪ್ರದರ್ಶನ ನಡೆಯಲಿದೆ.
ಜುಲೈ 5ರಂದು ಬರ್ಮಿಂಗ್ಹಮ್ ನಲ್ಲಿ ಭಸ್ಮಾಸುರ ಮೋಹಿನಿ, ಜು.6 ರಂದು ಬ್ರಿಸ್ಟಲ್ ನಲ್ಲಿ ಗಾನ – ನೃತ್ಯ ವೈಭವ ಆಯೋಜನೆಗೊಂಡಿದೆ.
ಕನ್ನಡದ ಕಲೆಯನ್ನು ವಿದೇಶಿ ನೆಲದಲ್ಲಿ ಪ್ರಸ್ತುತಗೊಳ್ಳುವ ಕ್ಷಣಕ್ಕಾಗಿ ನಾವು ಕಲಾವಿದರು ಕೂಡ ಕಾಯುತ್ತಿದ್ದೇವೆ ಎಂದು ಅಭಿನೇತ್ರಿಯ ಮುಖ್ಯಸ್ಥ ಕಲಾವಿದ ನೀಲ್ಕೋಡ್ ಪ್ರತಿಕ್ರಿಯೆ ನೀಡಿದ್ದಾರೆ.